Sunday, 26 June 2011

ಋಣಾನುಬಂಧ ರೂಪೇಣ..................

ಸಾಧಿಸಿದರೆ ಸಬಳ ನುಂಗಬಹುದಂತೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಬರಿ ಹುಲ್ಲು ಕಡ್ಡಿಯನ್ನೂ ನುಂಗಲು ಸಾಧ್ಯವಾಗುತ್ತಿಲ್ಲ. ಒಬ್ಬ ಪ್ರಯತ್ನಪಟ್ಟು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡರೆ, ಅವನಷ್ಟೇ ಪ್ರಯತ್ನಪಟ್ಟ ಇನ್ನೋರ್ವನಿಗೆ ಶಿಕ್ಷಣ-ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಒಬ್ಬ ನಟನ ಚಲನಚಿತ್ರ ನೂರು ದಿನ ಓಡಿದರೆ, ಅವನಿಗಿಂತ ಸ್ವಲ್ಪ ಹೆಚ್ಚೇ ಪ್ರತಿಭೆಯನ್ನು ಹೊಂದಿರುವ ಇನ್ನೊಬ್ಬ ನಟನ ಚಿತ್ರವು ಮೂರು ದಿನಕ್ಕೇ ಮುಗ್ಗರಿಸಿ ಬಿಡುತ್ತದೆ. ವ್ಯಾಪಾರಿಯೊಬ್ಬ ಯಾವುದೇ ಕಷ್ಟ ಪಡದೆ ಗಿರಾಕಿಗಳನ್ನು ಗಿಟ್ಟಿಸಿಕೊಂಡು ಲಾಭ ಮಾಡುತ್ತಿದ್ದರೆ, ಅದೇ ಏರಿಯಾದಲ್ಲಿರುವ ಇನ್ನೊಬ್ಬ ವ್ಯಾಪಾರಿಯು ಗಿರಾಕಿಗಳನ್ನು ಸಳೆಯಲು ಏನೆಲ್ಲಾ ಮ್ಯಾಜಿಕ್ಕುಗಳನ್ನು  ಮಾಡಿದರೂ ವ್ಯಾಪಾರವಾಗುತಿಲ್ಲ.ಇದನೆಲ್ಲ ನೋಡಿದಾಗ, ನಮ್ಮ ಸ್ವಪ್ರಯತ್ನದ ನಡುವೆಯೂ ಯಾವುದೊ ಒಂದು ಕಾಣದ ಕೈ ನಮ್ಮ ಸಾಧನೆಯನ್ನು ನಿಯಂತ್ರಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ಕಾಣದ ಕೈಯನ್ನು ನಮ್ಮವರು ಭಗವಂತ, ಅದೃಷ್ಟ, ಪರಮಾತ್ಮ,ಲಕ್, ಗಾಡ್ ಹೀಗೆ ಅನೇಕ ಹೆಸರುಗಳಿಂದ ಗುರುತಿಸುತ್ತಾರೆ.

ಪರದೆಯ ಹಿಂದಿರುವ ಸೂತ್ರಧಾರನ ಅಸ್ತಿತ್ವವನ್ನು ತಿಳಿದೇ, ನಾನಿದ್ದೇನೆ ನಾನಿದ್ದೇನೆ.. ಹೆದರಬೇಡಿ ಎಂದೆನ್ನಿತಿದ್ದ ವೈದ್ಯನೊಬ್ಬ  ಶಸ್ತ್ರಚಿಕಿತ್ಸೆ ಮಾಡುವ ಮೊದಲು ಮೇಲೆ ನೋಡಿ ನಮಸ್ಕರಿಸುತ್ತಾನೆ. ವರ್ಷಪೂರ್ತಿ ಏನೂ ಓದದೆ ಪರೀಕ್ಷೆಯ ಹಿಂದಿನ ದಿನ ರಾಮ-ಕೃಷ್ಣರ ಫೋಟೋಗಳನ್ನು ಪುಸ್ತಕದೆಡೆಯಲ್ಲಿ ಇಟ್ಟು  ಅದರ ಮೇಲೇನೆ ನಿದ್ದೆಹೋಗಿ ಮರುದಿನ ಪರೀಕ್ಷೆಯಲ್ಲಿ ಏನೋ ಬರೆದು ಪಾಸಾದ ವಿದ್ಯಾರ್ಥಿಗಳೂ ಇದ್ದಾರೆ. ಆಧುನಿಕ ವೈಜ್ಞಾನಿಕ ಪದ್ಧತಿಯಿಂದ ತಯಾರಿಸಲಾದ ಕ್ಷಿಪಣಿಗಳನ್ನು ಉಡ್ಡಯನ   ಮಾಡಲೂ ಶುಭಶಕುನದ ಮೊರೆ ಹೋಗುತ್ತಾರೆ ಎಂದು  ಎಲ್ಲೋ ಓದಿದ ನೆನಪು. ನಮ್ಮ ಸಾಧನೆಗೆ ಅದೃಷ್ಟ ಎಷ್ಟು ಮುಖ್ಯವೋ ಋಣವೂ ಅಷ್ಟೇ ಮುಖ್ಯ. ಅದೃಷ್ಟ ಮತ್ತು ಋಣ ಒಂದೇ ಅರ್ಥವನ್ನು ನೀಡುತ್ತವೆಯಾದರೂ ಇವೆರಡರುಗಳ ಮಧ್ಯೆ ಚಿಕ್ಕ ಎಳೆಯ ವ್ಯತ್ಯಾಸವಿದೆ. ಭಾರತೀಯರ ಪ್ರಕಾರ ಋಣವೆಂದರೆ ಈ ಜನ್ಮ ಯಾ ಹಿಂದಿನ ಜನ್ಮದಲ್ಲಿ ನಾವು ಮಾಡಿದ ದಾನ-ಧರ್ಮದಂತಹ ಕಾರ್ಯದಿಂದ ಪಡೆದ ಪುಣ್ಯವೇ  ಆಗಿದೆ. ನಾವು ಈ ಜನ್ಮದಲ್ಲಿ ಪಡೆಯಲಿರುವ ಶಾಂತಿ-ಅಶಾಂತಿ, ಸುಖ-ದುಖ, ಉತ್ತಮ ಸ್ಥಾನ-ನೀಚ ಸ್ಥಾನಕ್ಕೆ ಈ ಪುಣ್ಯವೇ ಕಾರಣವಾಗಿರುತ್ತದೆ. ಇದನ್ನೇ ಮುಂದುವರಿಸಿ, 'ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ'  ಎಂದಿದ್ದಾರೆ.  

ಕೆಲವರು ಮುಟ್ಟಿದೆಲ್ಲಾ ಚಿನ್ನವಾಗುತಿದ್ದರೆ, ಇನ್ನು ಕೆಲವರು ಚಿನ್ನವನ್ನು ಮುಟ್ಟಿದರೂ ಅದು ಕಬ್ಬಿಣವಾಗುತ್ತಿದೆ. ಇಲ್ಲಿ ನಮ್ಮ ಅದೃಷ್ಟ-ಪುಣ್ಯ ಕೆಲಸಮಾಡುತ್ತಿವೆ. ಜೀವನದಲ್ಲಿ ಉತ್ತಮ ಸಂಗಾತಿಯನ್ನು ಪಡೆಯುವುದು ಕೂಡ ನಮ್ಮ ಪುಣ್ಯದಿಂದಂತೆ. ಪ್ರೇಮ ವಿವಾಹ ಮತ್ತು ನಿಶ್ಚಯಿಸಿದ ವಿವಾಹದ ಮಧ್ಯೆ ಅನೇಕ ವರ್ಷಗಳಿಂದಲೂ ಘರ್ಷಣೆ ನಡೆಯುತ್ತಾ ಬಂದಿದೆ. ಕೆಲವರ ಪ್ರಕಾರ ಪ್ರೇಮ ವಿವಾಹದಿಂದ ಪರಸ್ಪರ ಚೆನ್ನಾಗಿ ಅರ್ಥೈಸಿಕೊಳ್ಳಲು ಸಾಧ್ಯವಿದೆಯಂತೆ. ಹೀಗೆ ಅನೇಕ ವರ್ಷಗಳಿಂದ ಅರ್ಥೈಸಿಕೊಂಡು ಮದುವೆಯಾದ ಗಂಡ/ಹೆಂಡತಿ ತನ್ನ ಪ್ರಿಯತಮೆ/ಪ್ರಿಯಕರ ನೊಂದಿಗೆ ಓಡಿಹೋದ ಪ್ರಸಂಗಗಳಿವೆ. ಹಿರಿಯರು ನಿರ್ಧರಿಸಿದ ಮದುವೆಯೂ ಮುರಿದು ಬಿದ್ದ ಘಟನೆಗಳಿಗೂ ನಮ್ಮ ಸಮಾಜ ಸಾಕ್ಷಿಯಾಗಿವೆ. ಎಷ್ಟೇ ಪ್ರಯತ್ನ ಪಟ್ಟರೂ ಹಲವು ಸಲ ನಾವು ನಮ್ಮ ಸಹಚರ/ಸಹಚಾರಿಣಿಯನ್ನು ಮನವೊಲಿಸುವಲ್ಲಿ ವಿಫಲರಾಗುತಿದ್ದೇವೆ. ಋಣವಿದ್ದರಷ್ಟೇ ಜೀವನಪೂರ್ತಿ ಸಂತೋಷದಿಂದ ದಾಂಪತ್ಯ ಮಾಡಲು ಸಾಧ್ಯ.

ಉತ್ತಮ ಪುತ್ರ-ಪುತ್ರಿಯರನ್ನು ಪಡೆಯಲೂ ದಂಪತಿಗಳು ಪುಣ್ಯಮಾಡಿರಬೇಕು. ಮಗ/ಮಗಳ ಸಾಧನೆಯನ್ನು ನೋಡಿ ಶಬ್ಬಾಶ್ ಎನ್ನುವ ತಂದೆ-ತಾಯಿಗಳಿದ್ದರೆ, ಇಂತಹ ಸಂತಾನ ತಮ್ಮ ಹೊಟ್ಟೆಯಲ್ಲಿ ಹೇಗಾದರೂ ಹುಟ್ಟಿತೋ ಎಂದು ಪರಿತಪಿಸುವ ಹೆತ್ತವರೂ ಇದ್ದಾರೆ. ತಮ್ಮ ಮಕ್ಕಳ ಸ್ವಭಾವವನ್ನು ತಾವೇ ತಿದ್ದಿ-ತೀಡಿ ಅವರನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತೆವೇಯೆಂದು ಹೇಳುವುದು ಸ್ವಲ್ಪ ಹಾಸ್ಯಾಸ್ಪದವಾಗುತ್ತದೆ. ಹೆತ್ತವರು ಎಷ್ಟೇ ಪ್ರಯತ್ನಪಟ್ಟರೂ ಸಮಾಜದ ಇನ್ನೂ ಅನೇಕ ವಿಷಯಗಳು ಮಕ್ಕಳ ಮೇಲೆ ಪ್ರಭಾವಬೀರುವುದರಿಂದ ಸತ್ಪುತ್ರರನ್ನು ಪಡೆಯುವುದು ಎಲ್ಲರ ಕೈಯಿಂದ ಸಾಧ್ಯವಾಗುತ್ತಿಲ್ಲ. ಇದನ್ನು ತಿಳಿದಿದ್ದರೂ ಸಹ ವಿಜ್ಞಾನಿಗಳು ಇಂದು 'ಸ್ಮಾರ್ಟ್ ಬೇಬಿ'ಯ ಸೃಷ್ಟಿಗೆ ಸಿದ್ಧತೆ ನಡೆಸುತಿದ್ದಾರೆ. ಇದರಲ್ಲಿ ಅವರು ಎಷ್ಟು ಯಶಸ್ಸನ್ನು ಪಡೆಯುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ. ಪುಣ್ಯಗಳಿಕೆ ಗಟ್ಟಿಯಾಗಿದ್ದರಷ್ಟೇ ಉತ್ತಮ ತಂದೆ -ತಾಯಿ, ಬಂಧು-ಬಳಗ, ಸ್ನೇಹಿತರನ್ನು ಪಡೆದು ಅವರೊಂದಿಗೆ ಉತ್ತಮ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ.

ಅದೃಷ್ಟ ಪುಣ್ಯಗಳಂತೆ ಗುರು-ಹಿರಿಯರ ಆಶೀರ್ವಾದ, ಗೆಳೆಯರ ಹಾರೈಕೆಗಳೂ ಅಮ್ಮ ಸಾಧನೆಯನ್ನು ನಿರ್ಧರಿಸುತ್ತವೆ. ಆದರೆ ಇವುಗಳೇ ಎಲ್ಲ ಅಲ್ಲ. ಸ್ವಪ್ರಯತ್ನವಿಲ್ಲದಿದ್ದರೆ ಎಲ್ಲವೂ ತುಚ್ಚ. ಉದಾಹರಣೆಗೆ ಒಬ್ಬ I A S ಅಧಿಕಾರಿಯಾಗಬಯಸಿದ್ದಾನೆ    ಎಂದುಕೊಳ್ಳಿ. ಅದೃಷ್ಟ, ಪುಣ್ಯ ಎಲ್ಲವೂ ಇದೆಯೆಂದು ಸುಮ್ಮನೆ ಕುಳಿತುಕೊಂಡರೆ ಅವನಷ್ಟು ಮೂರ್ಖ ಇನ್ನೊಬ್ಬನಿರಲು ಸಾಧ್ಯವಿಲ್ಲ. ಅದಕ್ಕಾಗಿ ಅವನು ಅರ್ಜಿ ಸಲ್ಲಿಸಬೇಕು, ಪುಸ್ತಕ-ವಾರಪತ್ರಿಕೆ-ದಿನಪತ್ರಿಕೆಗಳ ಮೊರೆ ಹೋಗಬೇಕು, ಹಗಲು ರಾತ್ರಿಯೆನ್ನದೆ ಕಷ್ಟ ಪಡಬೇಕು, ಸಾಧ್ಯವಾದರೆ ದೂರದೂರಿನ ಕೋಚಿಂಗ್ ಗೂ ಹೋಗಬೇಕು. ಇಷ್ಟೆಲ್ಲಾ ಆದಮೇಲೆ ಅದೃಷ್ಟ, ಆಶೀರ್ವಾದ, ಪುಣ್ಯ ಅವನ ಕೈ ಹಿಡಿದರೆ I A S ಅಧಿಕಾರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಪರಿಶ್ರಮ ಊಟವಾದರೆ, ಉಳಿದವುಗಳೆಲ್ಲ ಇನ್ನಿತರ ಭಕ್ಷಗಳಷ್ಟೇ. ಅವೇ ಪ್ರಮುಖವಾದರೆ ಅದು ನಮಗೆ ಮಾರಕ.

ಉತ್ತಮ ಪರಿಶ್ರಮವನ್ನು ಹಾಕೋಣ, ಉತ್ತಮ ಕಾರ್ಯಗಳಿಂದ ಪುಣ್ಯದ ಬುತ್ತಿಯನ್ನೂ ಕಟ್ಟಿಕೊಳ್ಳೋಣ, ಗುರು-ಹಿರಿಯರ ಆಶಿರ್ವಾದವನ್ನೂ ಬೇಡೋಣ. ಇದರ ಜೊತೆ ಸಹಮನಸ್ಸನ್ನು ಹೊಂದಿರುವ ಗೆಳೆಯರ ಹಾರೈಕೆಗಳೊಂದಿಗೆ ಸಾಧನೆಯ ಮೆಟ್ಟಿಲನ್ನು ಹತ್ತೋಣ. ಜೈ ಹೋ........... 

No comments:

Post a Comment