Wednesday, 22 June 2011

ಇರುವುದೆಲ್ಲವ ಬಿಟ್ಟು..............

ಮೇರೆ ಪಾಸ್ ಗಾಡಿ ಹೇ, ಬಂಗ್ಲಾ ಹೇ............ತೇರೆ ಪಾಸ್ ಕ್ಯಾ ಹೇ?
ಮೇರೆ ಪಾಸ್ ಮಾ ಹೇ...........

ಪ್ರಸಿಧ್ದ ಸಿನಿಮಾವೊಂದರ ಸಂಭಾಷಣೆಯ ತುಣುಕು ಇದು. ಇಲ್ಲಿ ಗಾಡಿ, ಬಂಗಲೆ ಎಲ್ಲಾ ಐಶ್ವರ್ಯದ ಪ್ರತೀಕವಾದರೆ, ತಾಯಿಯನ್ನು ಪ್ರೇಮದ ಪ್ರತಿರೂಪದಂತೆ ಬಿಂಬಿಸಲಾಗಿದೆ. ಪ್ರೀತಿಯನ್ನು ಯಾವುದೇ ಸುಖದ ಸುಪ್ಪತ್ತಿಗಿಂತಲೂ ಮೇಲು ಎನ್ನಲಾಗುತ್ತದೆ. ಆದರೂ ಧನ-ಕನಕ ಹಾಗು ಪ್ರೀತಿ-ಪ್ರೇಮಗಳ ಮಧ್ಯೆ ಕಲಹ ಹಲವಾರು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.

ನಮ್ಮ ಜೀವನದಲ್ಲಿ ಹಣವೇ ಎಲ್ಲ ಅಲ್ಲ. ಪ್ರೀತಿ,ಪ್ರೇಮ,ವಾತ್ಸಲ್ಯ,ಮಮತೆ ಮೊದಲಾದುವುಗಳಿಗೆ ಜಾಗವಿಲ್ಲವೆನ್ದಾದರೆ ಎಷ್ಟು ಹಣವಿದ್ದರೂ ವ್ಯರ್ಥ. ಹಣದಿಂದ ಹಾಸಿಗೆಯನ್ನು ಕೊಂಡುಕೊಳ್ಳಬಹುದು ಆದರೆ ನಿದ್ದೆಯನ್ನಲ್ಲ. ಹಣವಿದ್ದರೆ ಮನೆಯನ್ನು ಕಟ್ಟಿಸಬಹುದು ಆದರೆ ಮನಸ್ಸನ್ನಲ್ಲ. ಪ್ರೀತಿ ಪ್ರೇಮಗಳ ಗುಣಗಾನವನ್ನು ಮಾಡಿರುವ ಹಲವಾರು ಪ್ರವಚನಗಳು, ಕಾದಂಬರಿಗಳು, ಸಿನೆಮಾಗಳು ನಮ್ಮ ಮುಂದಿವೆ.

ಸರಿ, ಜೀವನದಲ್ಲಿ ಹಣ ಎಲ್ಲವೂ ಅಲ್ಲ. ಆದರೆ ಹಣವಿಲ್ಲದೆಯೂ ಏನೂ ಇಲ್ಲ. ಯಾವುದೊ ಸಿನೆಮಾದ ಸಂಭಾಷಣೆಯಂತೆ 'ಈ ಪ್ರೀತಿ ಪ್ರೇಮ..ಎಲ್ಲಾ ಪುಸ್ತಕದ ಬದನೇಕಾಯಿ'. ನಮ್ಮನ್ನು ಅತೀವ ಪ್ರೀತಿಸುವ ಮಡದಿಯೋ ಮಕ್ಕಳೋ ಯಾರೇ ಆಗಿರಲಿ ಅವರ ಹೊಟ್ಟೆ ಹೊರಲು ದುಡಿಯಲೇ ಬೇಕು. ಪ್ರೀತಿ ಪ್ರೇಮದಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ.ಹಣದಿಂದ ನಿದ್ದೆ ಖರೀದಿಸಲು ಸಾಧ್ಯವಿಲ್ಲದಿರಬಹುದು. ಆದರೆ ನಿದ್ದೆ ಬಂದಾಗ ನಿದ್ದೆ ಮಾಡಲು ಹಾಸಿಗೆ... ಕಡೆ ಪಕ್ಷ ಚಾಪೆಯಾದರೂ ಇರಲೇ ಬೇಕು. ಅದು ಕೊಳ್ಳಲು ಹಣವಂತೂ ಬೇಕೇ ಬೇಕು. ದುಡ್ಡಿನಿಂದ ಮನಸ್ಸು ಕಟ್ಟಲು ಸಾಧ್ಯವಾಗದೆ ಇರಬಹುದು, ಆದರೆ ಮನಸ್ಸು  -ಮನಸ್ಸುಗಳ ಮಿಲನವಾದನಂತರ ಜೊತೆಯಾಗಿ ವಾಸಿಸಲು ಮನೆಯಂತೂ ಇರಲೇ ಬೇಕು. ಪ್ರೀತಿ ಪ್ರೇಮಕ್ಕೆ ಜೈ ಅನ್ನುತ್ತಾ ಕಥೆಗಾರರು ಹಲವಾರು ಕಥೆ-ಕಾದಂಬರಿಗಳನ್ನು ಬರೆದಿರಬಹುದು, ಪ್ರವಚನಕಾರರು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾ ಪ್ರವಚನಗಳನ್ನು ನೀಡಿರಬಹುದು, ಅನೇಕ ಚಲನಚಿತ್ರಗಳೂ ಬಂದಿರಬಹುದು. ಆದರೆ...ಇವು ಎಲ್ಲದರ ಗುರಿ ಹಣಗಳಿಕೆಯೇ ಆಗಿರುತ್ತದೆ. ಹಣದ ಮಹತ್ವವನ್ನು ತಿಳಿದೇ ಇರಬೇಕು, ಪುರುಷಾರ್ಥಗಳಲ್ಲಿ ಅದಕ್ಕೂ ಒಂದು ಸ್ಥಾನ ಕಲ್ಪಿಸಿಕೊಡಲಾಗಿದೆ.

ಅಧುನಿಕ ಯುಗದಲ್ಲಿ ಉತ್ತಮ ಜೀವನವನ್ನು ನಡೆಸಲು ಪ್ರೀತಿ, ಪ್ರೇಮ, ಮಮತೆಗಳೆಂಬ ಸುಮಧುರ ಭಾವನೆಗಳು ಎಷ್ಟು ಅಗತ್ಯವೋ ಬ್ಯಾಂಕ್ ಬ್ಯಾಲೆನ್ಸೂ ಅಷ್ಟೇ ಜರೂರಿ.ಇವು ನಮ್ಮೆರಡು ನಯನಗಳೆನ್ದರೂ ತಪ್ಪಾಗಲಾರದು. ಒಬ್ಬ ಹುಟ್ಟುತ್ತಲೇ ಕುಬೇರನಾಗಿರಬಹುದು, ಇನ್ನೊಬ್ಬ ಕುಚೇಲ ವಂಶಸ್ಥನೆ ಆಗಿರಬಹುದು ಆದರೆ ಈ ಜಗತ್ತಿನಲ್ಲಿ ಧನ ಹಾಗು ಸ್ನೇಹ ಗಳಿಕೆಗೆ ಇಬ್ಬರಿಗೂ ಸಮಾನ ಅವಕಾಶವಿದೆ. ಕೆಲವರು ಹಣಗಳಿಕೆಯಲ್ಲಿ ಹಿಂದುಳಿದರೆ ಮತ್ತೆ ಕೆಲವರು ಪ್ರೀತಿ ಗಳಿಕೆಯಲ್ಲಿ. ಇವು ಎರಡರ ಮಧ್ಯೆ ಯಾರು ಸಮತೋಲನವನ್ನು ಕಾಯ್ದುಕೊಳ್ಳುತಾನೋ  ಅವನೇ ಸುಖಿಯಗಿರುತ್ತಾನೆ.

ಅರ್ಥಶಾಸ್ತ್ರದಲ್ಲಿ "law of scarcity " ನನ್ನನ್ನು ಬಹಳವಾಗಿ ಸೆಳೆದಂತಹ ಒಂದು ತತ್ವ. ಇದರ ಪ್ರಕಾರ ಕೊರತೆಯು (scarcity )  ಬೇಡಿಕೆಯನ್ನು (demand ) ನಿರ್ಧರಿಸುತ್ತದೆ. ಈ ತತ್ವವನ್ನು ನಮ್ಮ ಜೀವನಕ್ಕೂ ಹೋಲಿಸಿ ನೋಡಬಹುದು. ನಮ್ಮ ಜೀವನದಲ್ಲಿ ಯಾವುದಕ್ಕೆ ಕೊರತೆಯಿದೆಯೋ ಅದಕ್ಕೆ ನಾವು ಬಹಳ ಬೇಡಿಕೆಯನ್ನಿಡುತ್ತೇವೆ. ಗಂಡ ಎಷ್ಟೇ ಪ್ರೀತಿಯನ್ನು ತೋರಿಸಲಿ, ಅವನಿಗೆ ದುಡಿಮೆಯಿಲ್ಲವಾದರೆ ಯಾ ದುಡಿಮೆ ಕಡಿಮೆಯಾಗಿದ್ದರೆ ಇನ್ನೂ ಹೆಚ್ಚು ದುಡಿಯುವಂತೆ ಹೆಂಡತಿ ಪೀಡಿಸುತ್ತಾಳೆ. ಕೆಲ ಪತ್ನಿಯರು ತಮ್ಮ ಪತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಗಳಿಸಲಿ ಪ್ರೀತಿ ತೋರಿಸದ ಪತಿ ಪತಿಯೇ ಅಲ್ಲ ಎಂದು ಮೂದಲಿಸುತ್ತಾರೆ.ಒಟ್ಟಾರೆಯಾಗಿ ನಾವು ಸಮತೋಲನವನ್ನು ಕಾಪಾಡುವಲ್ಲಿ ಹಿಂದೆ ಬೀಳುತಿದ್ದೇವೆ.ಇಂದು ನಾವು ಇರುವುದನ್ನೆಲ್ಲ ಬಿಟ್ಟು ಇಲ್ಲದಿರುವುದರ ಬಗ್ಗೆ ಚಿಂತಿಸುತ್ತಿದ್ದೇವೆ.ದೂರದ ಬೆಟ್ಟವೇ ನಮಗೆ ಸುಂದರವಾಗಿ ಕಾಣುತ್ತಿದೆ.ಇದು ಬರಿ ಹಣ, ಪ್ರೀತಿಗೆ ಸೀಮಿತವಾಗಿರದೆ ಜೀವನದ ಪ್ರತಿಯೊಂದು ಹಂತದಲ್ಲೂ ಕಾಣಸಿಗುತ್ತದೆ.

ಹಳ್ಳಿಯಲ್ಲೇ ಹುಟ್ಟಿ ಬೆಳೆದ ಹೈದನೋರ್ವನಿಗೆ ಪಟ್ಟಣ ಕೈ ಬೀಸಿ ಕರೆಯುತಿದ್ದರೆ, ನಗರದಲ್ಲಿ ಉತ್ತಮ ದುಡಿಮೆಯಲ್ಲಿರುವ  ವ್ಯಕ್ತಿಯೊಬ್ಬ ಎಲ್ಲವನ್ನು ತ್ಯಜಿಸಿ ಕಾಡಲ್ಲಿ ವಾಸ ಮಾಡಲು ಮನ ಮಾಡಿದರೆ ಅಚ್ಚರಿಯೇನಿಲ್ಲ.......

ಎರಡೆರಡು i-phone ಗಳನು  ಹೊಂದಿರುವ ನನ್ನ ಒಬ್ಬ ಗೆಳೆಯನು ಅದನ್ನು ಬಳಸಿ-ಬಳಸಿ ಬೇಸರಗೊಂಡು ಅದ್ಯಾವುದೋ ಕಪ್ಪು-ಬಿಳಿ ಹ್ಯಾಂಡ್ ಸೆಟ್ಟಿಗೆ ಮೊರೆ ಹೋಗಿದ್ದಾನೆ..... 

ದೇಹ ಪೂರ್ತಿ ಮುಚ್ಚುವಷ್ಟು ಅಪ್ಪಟ ಚಿನ್ನಾಭರಣಗಳನ್ನು ಹೊಂದಿದ್ದರೂ ಶ್ರೀಮತಿಯೊಬ್ಬರು ನಕಲಿ ಆಭರಣಗಳಿಗೆ(imitation jewellery) ಮನಸೋತಿದ್ದಾರೆ......

ಇಲ್ಲೊಬ್ಬ ಪತಿರಾಯ ಸುಂದರ ಹೆಂಡತಿಯೊಬ್ಬಳು ಮನೆಯೊಳಗಿದ್ದರೂ ಇನ್ನೊಬ್ಬ ಹೆಂಗಸಿನೊಂದಿಗೆ ಸಂಬಂಧ ಹೊಂದಿದ್ದಾನೆ......  

.........ಹೀಗೆ ಹುಡುಕಿದರೆ ಹತ್ತು ಹಲವಾರು ಉದಾಹರಣೆಗಳು ಕಣ್ಣ ಮುಂದೆ ಬರುತ್ತವೆ.ಕೆಲವೊಮ್ಮೆ ಇವು ತಪ್ಪೆಂದು ಅನಿಸುವುದೇ ಇಲ್ಲ. ಯಾಕಂದರೆ ಲೈಫು ಇಷ್ಟೇನೆ....ಅಲ್ಲಲ್ಲ....ಲೈಫು ಹಿಂಗೆನೆ..........

  
  

No comments:

Post a Comment