Saturday, 13 August 2011

ನಾವೂ............. ನಮ್ಮೊಳಗಿರುವ ದೇಶದ್ರೋಹಿಗಳೂ..........

ಇಡೀ ದೇಶವೇ ಸ್ವಾತಂತ್ರ್ಯೋತ್ಸವದ  ಸಂಭ್ರಮದಲ್ಲಿದೆ. ಕೆಲವರಲ್ಲಂತೂ ದೇಶ ಪ್ರೇಮ ಉಕ್ಕಿ ಹರಿಯುತ್ತಿದೆ.ನಾಡನ್ನೆ ಲೂಟಿ ಹೊಡೆದ ನಾಯಕರುಗಳ ಕೈಯಲ್ಲಿ ಧ್ವಜಾರೋಹಣ ನಡೆಸಲ್ಪಡುತ್ತದೆ. ಕೆಲವರಿಗಂತೂ ಉಳಿದ ರಜೆಗಳಂತೆ ಇದೂ ಕೂಡಾ ಒಂದು. ಬ್ರಿಟಿಷರ ಆಡಳಿತದಲ್ಲಿ ಬಳಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪೀಳಿಗೆಯವರಲ್ಲಿ ಕೆಲವರೇ ಇಂದು ಬದುಕಿ ಉಳಿದಿದ್ದಾರೆ. ಭಾರತ ದೇಶವು ಬ್ರಿಟೀಷರ ಆಡಳಿತದಲ್ಲಿದ್ದಾಗ ಪಟ್ಟಂತಹ ಪಾಡೇನು ಎಂಬುದರ ಬಗ್ಗೆ ಕಲ್ಪನೆಯನ್ನೂ ಮಾಡಲು ನಾವು ಸಿದ್ಧರಿಲ್ಲ. ಇದರಿಂದಾಗಿ ದಿನೇ ದಿನೇ ಸ್ವಾತಂತ್ರ್ಯದ ಮಹತ್ವವೂ ಕಡಿಮೆಯಾಗುತ್ತಿದೆ. ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಸ್ವಲ್ಪ ಹೆಚ್ಚೇ ಆಗಿ ಅದು ಸ್ವೇಚ್ಚಾಚಾರವಾಗಿ ಪರಿವರ್ತನೆಯಾಗಿದೆ.

ಹಲವಾರು ಹೋರಾಟಗಳ ಪರಿಣಾಮವಾಗಿಯೇ ಭಾರತವು ಸ್ವತಂತ್ರವಾಯಿತು. ನಾವು ಹೊರಗಿನವರಾದ ಆಂಗ್ಲರಿಂದ ಸ್ವಾತಂತ್ರಗೊಂಡಿರಬಹುದು. ಆದರೆ ನಮ್ಮೊಳಗಿನ ಶತ್ರುಗಳಾದ ಅರಿಷಡ್ವರ್ಗಗಳಿಂದ ಸ್ವತಂತ್ರಪಡೆಯಲು ಸಾಧ್ಯವಾಗಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ದುಷ್ಟ ಶಕ್ತಿಗಳು ನಮ್ಮನ್ನು ಆಳುತ್ತಿವೆ. ಅಂದು ನಾವು ಇದೆ ಶಕ್ತಿಗಳಿಂದ ಬಂಧಿತರಾಗಿದ್ದುದರಿಂದಲೇ ಬ್ರಿಟೀಷರು ಭಾರತಕ್ಕೆ ಬರಲು ಸಾಧ್ಯವಾಯಿತು. ಇದೆ ಚಾಳಿಯನ್ನು ಮುಂದುವರಿಸಿದರೆ ಇನ್ನೊಂದು ದೇಶವೂ ನಮ್ಮನ್ನು ಆಳಲು ಇಚ್ಚಿಸಬಹುದು.

'ಕಾಮಾತುರಾಣಾಂ ನ ಭಯ ನ ಲಜ್ಜಾ' ಎಂದು ನಮ್ಮ ಪೂರ್ವಿಕರೇ ಹೇಳಿ ಬಿಟ್ಟಿದ್ದಾರೆ. ಇಂದು ನಮಗೆ ಆಸೆ ಹೆಚ್ಚಾಗುತ್ತಿದೆ. ಕಂಡದ್ದೆಲ್ಲಾ ಪಡೆಯುವ ಇಚ್ಛೆ ಅಧಿಕವಾಗುತ್ತಿದೆ. ನಮ್ಮ ಆಕಾಂಕ್ಷೆಯನ್ನು  ಹತ್ತಿಕ್ಕಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಭೋಗ ಭಾಗ್ಯಗಳ ಅಭಿಲಾಷೆಯಲ್ಲಿ ಅಡ್ಡ ದಾರಿ ಹಿಡಿಯುತ್ತಿದ್ದೇವೆ. ಅತ್ಯಾಚಾರ, ಅನಾಚಾರ ಮೇರೆ ಮೀರುತ್ತಿದೆ. ಕಲಿಯುಗದಲ್ಲಿ ಕಾಮಿನಿ-ಕಾಂಚನಗಳ ಹಿಂದೆ ಹೋಗುವವರು ಅಧಿಕವಾದ ಹಾಗೆ ಮಾಡಿದ ಪಾಪಕ್ಕೂ ಇದೇ ಜನ್ಮದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಗರಣಗಳಲ್ಲಿ ಪಾಲುದಾರರಾದ ಘಟಾನುಘಟಿಗಳೆಲ್ಲ ಒಬ್ಬೊಬ್ಬರಾಗಿ ಜೈಲು ಪಾಲಾಗುತಿದ್ದಾರೆ.

 ಇಂದು ನಾವು ಕೋಪವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲವೆನ್ನುವಂತೆ ನಡೆದುಕೊಳ್ಳುತಿದ್ದೇವೆ. ಕ್ಷಣ-ಕ್ಷಣಕ್ಕೂ ಸಿಟ್ಟುಗೊಳ್ಳುತಿದ್ದೇವೆ. ಇದೇ ಕೋಪ ವಿಪರೀತವಾಗಿ ತಂದೆ ಮಗನನ್ನೂ, ಮಗ ತಾಯಿಯನ್ನೂ ಕೊಂದಂತಹ ಘಟನೆಗಳೂ ಬಹಳಷ್ಟಿವೆ. ಇದೇ ಕ್ರೋಧದಿಂದಾಗಿ ಸ್ನೇಹಿತರು, ಬಂಧುಗಳು ದೂರವಾಗುತ್ತಿದ್ದಾರೆ. ನಾವು ಎಷ್ಟು ಉತ್ತಮರಾಗಿದ್ದರೂ ಸಹ ಕೆಲವೊಮ್ಮೆ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಏನೇನೋ ಮಾಡುತಿದ್ದೇವೆ. ಕೋಪ ನಮ್ಮ ವೈರಿಯಾದರೂ, ಹಲವಾರು ಸಂಧರ್ಭಗಳಲ್ಲಿ ಅದನ್ನು ನಮ್ಮ ಸ್ನೇಹಿತನಾಗಿ ಪರಿವರ್ತಿಸಿಕೊಳ್ಳಬಹುದು. ಎಲ್ಲಿ ಕೋಪವನ್ನು ಪ್ರದರ್ಶಿಸಬೇಕೋ ಅಲ್ಲಿ ನಾವು ಪ್ರದರ್ಶಿಸುವುದಿಲ್ಲ. ಆಗ ನಾವು ಶಿಖ0ಡಿಗಳಂತೆ ವರ್ತಿಸುತ್ತೇವೆ. ಜಗತ್ತು ನಡೆಯುವುದೇ ಹೀಗೆ ಎಂದು ಶಾಂತ ಮೂರ್ತಿಗಳಾಗಿ ಬಿಡುತ್ತೇವೆ.

 'ದೇಶ ತನಗೇನು ಕೊಟ್ಟಿತು ಎಂಬುವುದು ಮುಖ್ಯವಲ್ಲ. ನಾನು ದೇಶಕ್ಕೆ ಏನು ಕೊಟ್ಟೆ ಅದು ಮುಖ್ಯ' ಹೀಗೆ ಎಲ್ಲೋ ಓದಿದ ನೆನಪು. ಆದರೆ ನಾವಿಂದು ಇತರರಿಂದಲೇ ಏನನ್ನಾದರೂ ಬಯಸುತ್ತೆವೆಯೇ ಹೊರತು ನಾವು ಏನನ್ನೂ ಕೊಡಲು ಸಿದ್ಧರಿಲ್ಲ. ಬರೀ ನಾವೇ ಶ್ರೀಮಂತರಾಗುತಿದ್ದೆವೆಯೇ ಹೊರತು ಹೃದಯ ಶ್ರೀಮಂತಿಕೆ ಬೆಳೆಸುತ್ತಿಲ್ಲ. ತೆರಿಗೆಯನ್ನು ನೀಡದೆ ಸರಕಾರಕ್ಕೆ ಮೋಸಮಾಡುತಿದ್ದೇವೆ. ಸಿಕ್ಕ ತೆರಿಗೆಯಲ್ಲಿ ಜನಸೇವೆ ಮಾಡುತಿದ್ದೇವೆ ಎಂದು ಸಾರಿ  ಅರ್ಧದಷ್ಟು ಹಣ ಗುಳುಂ ಮಾಡುವ ರಾಜಕಾರಣಿಗಳು ಜನತೆಗೆ ಮೋಸ ಮಾಡುತಿದ್ದಾರೆ. ಪರಮ ಲೋಭಿಗಳಾದ ಪುರಂದರರೆ, ದಾಸ ಶ್ರೆಷ್ಟರಾದ ನಾಡಿದು. ಆದರೆ ನಮ್ಮ ಲೋಭತನವನ್ನು ಹೋಗಲಾಡಿಸಲು ಆ ಪರಮಾತ್ಮನೇ ಇಳಿದು ಬರಬೇಕೋ ಗೊತ್ತಾಗುತ್ತಿಲ್ಲ.

ಹೇಗೆ ನಾವು ಲೋಭಿಗಳಾಗಿ ಲಾಭದ ಬಗ್ಗೆ ಚಿಂತಿತರಾಗಿದ್ದೆವೆಯೋ ಹಾಗೇನೆ ಮೋಹ ಪಾಶಕ್ಕೊಳಗಾಗಿ ಬಂಧಿತರಾಗಿದ್ದೇವೆ. ಕೆಲವರು ತಮ್ಮನ್ನು ತಾವೇ ಅತಿಯಾಗಿ ಪ್ರೀತಿಸಿದರೆ, ಇನ್ನು ಅನೇಕರು ತಮ್ಮ ಕುಟುಂಬದ ಸದಸ್ಯರನ್ನೂ ಅಥವಾ ಗೆಳೆಯರನ್ನೂ ಅತಿಯಾಗಿ ಮೊಹಿಸುವವರಾಗಿರುತ್ತಾರೆ.ಅವರ ಬಗ್ಗೆ ಇವರಿಗೆ ಎಷ್ಟು ಮೋಹವಿರುತ್ತದೆಯೆಂದರೆ, ಅವರಿಗಾಗಿ ಏನೂ ಮಾಡಲು ತಯಾರಿರುತ್ತಾರೆ. ಇದು ಹಾಳಲ್ಲವೆ೦ದು ಮೇಲ್ನೋಟಕ್ಕೆ ಕಂಡು ಬಂದರೂ ಇದರಿಂದ ಇತರರು ತೊಂದರೆಗೊಳಗಾಗುತ್ತಾರೆ. ಗಂಡು ಮಕ್ಕಳು ಮೋಹಿಸಲ್ಪಟ್ಟು ಹೆಣ್ಣು ಮಕ್ಕಳು ಮೂದಲಿಕೆಗೆ ಒಳಗಾಗುತಿದ್ದಾರೆ.ದೊಡ್ದವನನ್ನು ತಾಯಿ ಹೆಚ್ಚಾಗಿ ಪ್ರೀತಿಸಿದರೆ, ಚಿಕ್ಕವನನ್ನು ತಂದೆಯು ಅತಿಯಾಗಿ ಹಚ್ಚಿಕೊಳ್ಳುತ್ತಾನೆ. ಇದು ಕೆಲವೊಮ್ಮೆ ಸಂಸಾರ ಕಲಹಕ್ಕೂ ಕಾರಣವಾಗುತ್ತದೆ. ಒಬ್ಬ ಅಥವಾ ಕೆಲವೇ ಶಿಷ್ಯಂದಿರಿಗೆ ಪ್ರಾಮುಖ್ಯತೆಯನ್ನು ಕೊಟ್ಟು ಗುರುಗಳು ಇತರರನ್ನು ಕಡೆಗಣಿಸುತ್ತಿದ್ದಾರೆ. ಅನ್ಯಾಯದಲ್ಲಿ  ಪಾಲುಗಾರನಾಗಿದ್ದಾನೆ ಎಂದು ತಿಳಿದಿದ್ದರೂ ತನ್ನ ಪಕ್ಷಕ್ಕೆ ಸೇರಿದವನೆನ್ನುವ ಕಾರಣದಿಂದ ಆರೋಪಿಯನ್ನು ಶಿಕ್ಷಿಸಲು ರಾಜಕಾರಣಿಗಳು ತಯಾರಿಲ್ಲ. ನಾವು ವ್ಯಕ್ತಿ-ವ್ಯಕ್ತಿಯನ್ನು ಮೋಹಿಸುತ್ತೇವೆಯೇ ಹೊರತು ದೇಶವನ್ನೇ ಪ್ರೀತಿಸಲು ಮನ ಮಾಡುತ್ತಿಲ್ಲ.

ಮದಗೊಳಗಾದ ಆನೆಯ ಹಿ೦ಡು ನಾಡಿಗಾದರೂ ಪ್ರವೇಶಿಸಲಿ ಅಥವಾ ಇನ್ನೊಂದು ಕಾಡಿಗಾದರೂ ಹೋಗಲಿ ಆ ಪ್ರದೇಶವು ಇನ್ನಿಲ್ಲದಂತೆ ನಿರ್ನಾಮವಾಗಿ ಬಿಡುತ್ತದೆ. ಅಂತಹ ಆನೆಗಳಿಗೂ ನಮಗೂ ಇಂದು ಯಾವುದೇ  ವ್ಯತ್ಯಾಸ ತಿಳಿಯುತಿಲ್ಲ. ಇನ್ನು ಕೆಲವರಿಗೆ ಹಣಬಲ, ಜನಬಲದ ಮದ ಹತ್ತಿ ಬಿಟ್ಟಿದೆ.ನಮ್ಮ ಅಧಿಕಾರ, ಬೆಳವಣಿಗೆ ಬಗ್ಗೆ ಹೆಮ್ಮೆ ಪಡುವುದು ತಪ್ಪಲ್ಲ, ಆದರೆ ಇದೇ ಹೆಮ್ಮೆ ಮದದ ರೂಪ ಪಡಕೊ೦ಡಾಗ ಆಗುವ ಅನಾಹುತಗಳಿಗೆ ಎಣೆಯಿಲ್ಲ. ಆಗ ನಾವು ನಡೆದದ್ದೇ ದಾರಿ ಎಂಬಂತೆ ನಡೆದುಕೊಳ್ಳುತ್ತೇವೆ. ಆದರೆ ಆ ದಾರಿಯಲ್ಲಿ ಖೆಡ್ಡಾಗಳಿವೆ, ಕಂದಕಗಳಿವೆ ಎಂದು ನಮಗೆ ತಿಳಿದು ಬರುವುದೇ ಇಲ್ಲ.ಹಣಬಲ, ಜನಬಲವಿದೆಯೆಂದು ಮದದಿಂದ ಚುನಾವಣೆಗೆ ನಿಂತಂತಹ ಅನೇಕ ಪುಂಡರು ಟೇವಣಿಯನ್ನೂ ಸಹ ಕಳಕೊಂಡಿದ್ದಾರೆ.ತಾವೇ ಶಕ್ತಿವ೦ತರೆಂದು ತಿಳಿದುಕೊಂಡ ಗಲ್ಲಿ ಗಲ್ಲಿ ರೌಡಿಗಳೆಲ್ಲಾ ಘೋರ ಮರಣವನ್ನು ಕಂಡಿದ್ದಾರೆ.

ನಮ್ಮ ಇನ್ನೊಬ್ಬ ಮುಖ್ಯ ವೈರಿಯೆ೦ದರೆ ಅದು ಮತ್ಸರ. ರಾಮ-ರಾವಣರ ಯುದ್ದದ ಮುನ್ನ ಪೂಜಾ ಸ೦ದರ್ಭದಲ್ಲಿ ಯಾವಾಗ ರಾಮನಿಗೆ ಬ್ರಾಹ್ಮಣನೊಬ್ಬನು ಸಿಗುವುದಿಲ್ಲವೋ ಆಗ ಅವನು ತನ್ನ ವೈರಿಯಾದ ರಾವಣನನ್ನೇ ಪೂಜಾ ಕಾರ್ಯ ನೆರವೆರಿಸಿಕೊಳ್ಳಲು ಭಿನ್ನವಿಸಿಕೊಳ್ಳುತ್ತಾನೆ. ವಿಪ್ರೋತ್ತಮನಾದ ರಾವಣನು ಯಾವುದೇ ಮತ್ಸರಕೊಳಗಾಗದೆ ಪೂಜೆ ನೆರವೇರಿಸಿ, ರಾಮನನ್ನು ತುಂಬು ಮನಸ್ಸಿನಿಂದ ಹರಸುತ್ತಾನೆ. ಬದ್ಧ ವೈರಿಯಾದರೂ ಸಹ ಬೇಡಿದಲ್ಲಿ ತುಂಬು ಹೃದಯದಿಂದ ಆಶೀರ್ವದಿಸಬೇಕೆಂದು ವೇದೋಕ್ತಿಗಳು ಹೇಳುತ್ತವೆ. ಆದರೆ ಇತರರು ನಮ್ಮ ಬಂಧು ಮಿತ್ರರೇ ಆಗಿರಲಿ, ಆದರೆ ರೂಪ-ಗುಣ-ಐಶ್ವರ್ಯ-ಅಂತಸ್ತುವಿನಲ್ಲಿ ನಮಗಿಂತ ಉತ್ತಮರಾಗಿದ್ದರೆ, ನಾವು ಹೊಟ್ಟೆ ಕಿಚ್ಚು ಪಟ್ಟೇ ಪಡುತ್ತೇವೆ. ಬರಿ ಅಷ್ಟಕ್ಕೇ ಸೀಮಿತವಾಗದೆ ಎಲ್ಲಾ ರೀತಿಯಲ್ಲೂ ಅವರ ಕಾಲೆಳೆಯುವ ಪ್ರಯತ್ನ ಮಾಡುತ್ತೇವೆ.

ಅರಿಷಡ್ವರ್ಗಗಳ ಪರಿಕಲ್ಪನೆ ಜಗತ್ತಿಗೆ ಭಾರತದ ಶ್ರೇಷ್ಠ ಕೊಡುಗೆ. ನಮ್ಮ ಪುರಾಣ, ವೇದ, ಉಪನಿಷತ್ತು, ಮೀಮಾಂಸೆ ಇವುಗಳೆಲ್ಲಾ ಇದರ ಸುತ್ತೆ ತಿರುಗಾಡುತ್ತವೆ. ನಿಮಗೆ ಇವು ಯಾವುದರ ಬಗ್ಗೆಯೂ ನಂಬಿಕೆ ಇಲ್ಲವೆಂದಾದರೆ ಇವುಗಳನೆಲ್ಲಾ ಬದಿಗಿರಿಸೋಣ. ಸ್ವಲ್ಪ ಮುಂದುವರಿದು ದೇಶವೆಂಬ ಕಲ್ಪನೆಯನ್ನೂ ಮರೆತು ವೈಜ್ಞಾನಿಕ ದ್ರಿಷ್ಟಿಯಿಂದ ನೋಡಿದಾಗಲೂ ಅರಿಷಡ್ವರ್ಗಗಳು ವ್ಯಕ್ತಿಗೆ ಮಾರಕವಾಗಿವೆ. ನಾವು ದಿನ ನಿತ್ಯ ಕೇಳುವಂತಹ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳು ಹಲವಾರು ಸಂಧರ್ಭಗಳಲ್ಲಿ ನಮ್ಮೊಳಗೇ ಇರುವ ಆರು ವೈರಿಗಳಿಂದ ಬಂದದ್ದಾಗಿದೆ. ಇಂದು ಪ್ರತಿಯೋರ್ವರೂ ಹೆಚ್ಚು-ಕಡಿಮೆ ಅರಿಷಡ್ವರ್ಗಗಳಿಂದ ಕಟ್ಟಲ್ಪಟ್ಟವರೆ.ಆದರೂ ಅದಕ್ಕೆ ಮಿತಿ, ಗಡಿಗಳು ಎನ್ನುವುದಿರುತ್ತದೆ. ಅದು ದಾಟಲ್ಪಟ್ಟರೆ ಮಾನಸಿಕ ಖಾಯಿಲೆಯಾಗಿ ನಮಗೆ 'ಹುಚ್ಚು' ಎಂಬ ಪಟ್ಟ ಸಿಕ್ಕರೂ ಸಿಗಬಹುದು.

 ನಮ್ಮ ಮನಸ್ಸಿನೊಳಗೆ ಆಂತರಿಕ ಕಲಹಗಳಿದ್ದರೂ, ನಮ್ಮ ದೇಶವು ಜಗತ್ತಿನ ಸುಭದ್ರ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣವಿಲ್ಲವೆಂದಲ್ಲ. ನಮ್ಮಲ್ಲಿ ಕೀಚಕರೊಂದಿಗೆ ಕೃಷ್ಣರೂ ಇದ್ದಾರೆ. 'ಸಮತ್ವ'ವನ್ನು ಪಡೆದ ಯೋಗಿಗಳಿದ್ದಾರೆ.ದೇಶಸೇವೆಗೆಂದು ತಮ್ಮ ಜೀವನವನ್ನೇ ಒತ್ತೆ ಇಟ್ಟಿರುವ ಹಲವಾರು ರಾಜಕಾರಣಿಗಳಿದ್ದಾರೆ. ಹಗಲು ರಾತ್ರಿಯೆನ್ನದೆ ದೇಶವನ್ನು ಕಾಯುತ್ತಿರುವ ಯೋಧರಿದ್ದಾರೆ. ದೇಶದಲ್ಲಿರುವ ಕೆಲವೇ ಕೆಲವು ಜನರುಗಳಿಂದ ಇಷ್ಟು  ಸಾಧ್ಯವಾಗಿರುವಾಗ, ಇನ್ನು ಎಲ್ಲರೂ ಉತ್ತಮರಾದರೆ ಹೇಗಿರಬೇಡ? ಅರಿಷಡ್ವರ್ಗಗಳಿಗೆ 'ಬೈ' ಅನ್ನೋಣ...... ಕಾಯಾ, ವಾಚಾ, ಮನಸಾ ಶುದ್ಧರಾಗೋಣ...... ಒಳ್ಳೆಯದನ್ನು ಮಾಡಲಾಗದಿದ್ದರೂ, ಕೆಟ್ಟ ವಿಚಾರಗಳಿಂದ ದೂರವಿರೋಣ........ಧರ್ಮ,ಅರ್ಥ, ಕಾಮ, ಮೋಕ್ಷಗಳನ್ನು ಹೊಂದೋಣ..........ನಿಜಾರ್ಥದಲ್ಲಿ ಸ್ವತಂತ್ರರಾಗೋಣ.....................ಸ್ವಾತಂತ್ರ್ಯದ ಶುಭಾಶಯಗಳು.................


Friday, 5 August 2011

ಉಳ್ಳವರು ಶಿವಾಲಯವ ಮಾಡುವರು...................

ಒಂದು ಕಾಡಿನಲ್ಲಿ ಆನೆ ಮತ್ತು ಇಲಿಗಳಿಬ್ಬರು ಗೆಳೆಯರಾಗಿದ್ದರು.ಅವರು ಹೇಗೆ ಗೆಳೆಯರಾದರು ಎಂಬುವುದು ಇಲ್ಲಿ ಮುಖ್ಯವಲ್ಲ.ಇಬ್ಬರೂ ಅನ್ಯೋನ್ಯವಾಗಿದ್ದರು.ಅದರೂ ಇಲಿಗೆ ಆನೆಯ ದೈತ್ಯ ದೇಹದ ಮೇಲೇ ಕಣ್ಣು. ಆನೆ ಲದ್ದಿ ಹಾಕುತ್ತದೆ, ತನಗೆ ಯಾಕೆ ಇದು ಸಾಧ್ಯವಿಲ್ಲವೆಂದು ಇಲಿ ಪ್ರತಿದಿನ ಚಿಂತಿಸುತಿತ್ತು. ತಾಲೂ ಲದ್ದಿ ಹಾಕಬೇಕೆಂದು ಹಲವಾರು ಪ್ರಯತ್ನಗಳನ್ನೂ ಮಾಡಿತು.ಕೊನೆಗೂ ಅದು ಸಫಲವಾಗಲೇ ಇಲ್ಲ.ಇದರಿಂದ ಜಿಗುಪ್ಸೆಗೊಂಡು ಇಲಿ 'suicide' ಮಾಡಿಕೊಂಡಿತಂತೆ.

ಇಂದು ನಾವು ಅನುಕರಣೆಯ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಒಬ್ಬರಂತೆ ಇನ್ನೊಬ್ಬರಾಗಳು ಪ್ರಯತ್ನಿಸುತ್ತಿದ್ದೇವೆ. ಈ ಪ್ರಯತ್ನದಲ್ಲಿ ಸತ್ಯತೆಯನ್ನು ತಿಳಿಯಲು ಸಾಧ್ಯವಾಗದೆ ದೊಡ್ಡ ಪ್ರಪಾತದಲ್ಲಿ ಬೀಳುತಿದ್ದೇವೆ. ನಾವೆಂದೂ ನಮ್ಮ ಸ್ಥಿತಿ-ಗತಿ, ಆರ್ಥಿಕ ಮಟ್ಟ, ಸಾಮರ್ಥ್ಯ, ಸಂಪ್ರದಾಯಗಳ ಬಗ್ಗೆ ಚಿಂತಿಸುವುದೇ ಇಲ್ಲ. ಯಾವುದೋ ಒಂದನ್ನು ಅನುಕರಿಸುತ್ತಾ ಅದನ್ನು ಪಡೆಯಲಾಗದೆ, ತಮ್ಮ ತನವನ್ನೂ ಕಳೆದುಕೊಂಡು 'ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ' ಎಂಬ ಸ್ಥಿತಿಯನ್ನು ತಲುಪುತಿದ್ದೇವೆ.

ಕಾಲೇಜಿಗೆ ಹೋಗುವ ವಿಧ್ಯಾರ್ಥಿಯೊಬ್ಬ ತನ್ನ ಶ್ರೀಮಂತ ಗೆಳೆಯನ ಬಳಿಯಿರುವ ದ್ವಿಚಕ್ರವಾಹನವನ್ನು ನೋಡಿ ತನಗೂ ಕೊಡಿಸುವಂತೆ ಹೆತ್ತವರಲ್ಲಿ ದುಂಬಾಲು ಬೀಳುತ್ತಾನೆ. ಶಿಕ್ಷಣ ಕೊಡಿಸುವುದೇ ದುಸ್ಥಿರವಾಗಿರುವಾಗ ಆ ತಂದೆ-ತಾಯಿ ಮಗನ ಆಸೆಯನ್ನು ಹೇಗೆ ತಾನೇ ಪೂರೈಸಲು ಸಾಧ್ಯ? ಅದೇ ಕಾಲೇಜಿಗೆ ಹೋಗುವ ಇನ್ನೊಬ್ಬ ವಿದ್ಯಾರ್ಥಿಯು ಸದಾ 'ಗರ್ಲ್ ಫ್ರೆಂಡ್' ಗಳಿಂದ ಸುತ್ತುವರಿದಿರುವ ತನ್ನ ಗೆಳೆಯನೊಬ್ಬನನ್ನು ನೋಡಿ ಆಕರ್ಷಣೆಯೋ ಪ್ರೀತಿಯೋ ತಿಳಿಯದೆ ಯಾವುದೊ ಹುಡುಗಿಯ ಮೋಹ ಪಾಶದಲ್ಲಿ ಸಿಲುಕಿ ಕೊನೆಗೆ ಅವಳು ಕೈ ಕೊಟ್ಟಾಗ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಾದಾ ಕಚೇರಿಯಲ್ಲಿ ಕೆಲಸ ಮಾಡುವಂತಹ ಗುಮಾಸ್ತನೊಬ್ಬನು, ತನ್ನ ಸಂಬಂಧಿಯೊಬ್ಬ ಕಟ್ಟಿಸಿದ ಐಶರಾಮಿ ಬಂಗಲೆಯಿಂದ ಪ್ರೇರಿತನಾಗಿ ಅದೇ ರೀತಿಯ ಮನೆಯನ್ನು ಕಟ್ಟಿಸಲು ಮನ ಮಾಡುತ್ತಾನೆ. ಮೈತುಂಬಾ ಸಾಲ ಮಾಡಿ, ಮನೆ ಕಟ್ಟಿ ಬರ್ಜರಿಯಾಗೆ ಗೃಹ ಪ್ರವೇಶ ಮಾಡುತ್ತಾನೆ. ಬಳಿಕ ಸಾಲಗಾರರ ಬಾಧೆ ತಾಳಲಾರದೆ ಅದೇ ಮನೆಯಲ್ಲಿ ನೇಣಿಗೆ ಶರಣಾಗುತ್ತಾನೆ. ಹೀಗೆ ಅನುಕರಣೆಯನ್ನು ಅಪ್ಪಿಕೊಂಡು ಹಾಳಾದವರೇ ಬಹಳ.

ಬ್ರಿಟೀಷರು ಭಾರತಕ್ಕೆ ಬಂದು ಆಳ್ವಿಕೆ ಆರಂಭಿಸಿದಾಗ, ಇಡೀ ದೇಶವೇ ಅವರ ವಿರುದ್ಧ ಹೋರಾಡಿತು.ಅವರು ಎಷ್ಟೇ ಕಾಟ ಕೊಟ್ಟರೂ ನಮ್ಮಲ್ಲಿ ಕೆಲವರು ಅವರ ಸೂಟು-ಬೂಟು, ಶೀಮಂತಿಕೆ, ಭಾಷೆಯಿಂದ ಪ್ರೇರಿತರಾಗಿ ಅವರಿಗೇ ಜೈ ಎನ್ನುತ್ತಾ ಅತ್ಯುತ್ತಮ ಹುದ್ದೆಗೆ ಏರಿಬಿಟ್ಟರು. ಇಂದು ಕೂಡ ನಮ್ಮಲ್ಲೇ ಮೆಕಾಲೆಯ ಮಕ್ಕಳು ಅನೇಕರಿದ್ದಾರೆ. ಆ ಕಡೆ ಆ ಸಂಸ್ಕೃತಿಯನ್ನು ಪೂರ್ತಿಯಾಗಿ ಅಪ್ಪಿಕೊಳ್ಳಲಾಗದೆ, ಇತ್ತ ಅಪ್ಪಟ ಭಾರತೀಯರೂ ಆಗಿರದೆ, ದೇಶಿಯೂ ಅಲ್ಲ ವಿದೇಶಿಯೂ ಅಲ್ಲದಂತೆ ಬದುಕುತ್ತಿದ್ದಾರೆ.ಮನೆ ಮನೆಗಳಲ್ಲಿ ಉಪ್ಪಿಟ್ಟು ತಿಂದು, ಮೀಟಿಂಗು ನಡೆಸಿ ಶಕ್ತಿ ಶಾಲಿಯಾಗಿ ಅಧಿಕಾರಕ್ಕೇರಿದ ಶಿಸ್ತಿಗೆ ಹೆಸರಾಗಿದ್ದ ರಾಜಕೀಯ ಪಕ್ಷವೊಂದು, ಬಳಿಕ ಗಣಿ ಧಣಿಗಳ ಧನದಿಂದ ಉತ್ತೆಜನಗೊಂದು ರೆಸಾರ್ಟ್ ಸಂಸ್ಕೃತಿಗೆ ಶರಣಾಗಿ, ಅಶಿಸ್ತನ್ನು ಮೈಗೂಡಿಸಿಕೊಂಡು ಎರಡು ಬಣಗಳಾಗಿ ಈಗ ಜನತೆಯ ಮೂದಲಿಕೆಗೆ ಒಳಗಾಗಿರುವ ಉದಾಹರಣೆಯೂ ನಮ್ಮ ಮುಂದಿದೆ.

ಪರಮ ಶಕ್ತನಾದ ಪರಮಾತ್ಮನೇ ಇರಲಿ, ಇಲ್ಲ ವಿಜ್ಞಾನ ಹೇಳುವಂತೆ ಜೀವವಾಹಿನಿ (ಜೀನ್ಸ್) ಗಳೇ ಆಗಿರಲಿ, ಪ್ರತಿಯೊಬ್ಬ ಮನುಷ್ಯನಿಗೆ ಪ್ರತ್ಯೇಕವಾದ ರೂಪ-ಗುಣ-ಶಕ್ತಿ ನೀಡಲಾಗಿದೆ.ಇಲ್ಲಿ ಪ್ರತಿಯೋರ್ವನೂ ತನ್ನದೇ ರೀತಿಯಲ್ಲಿ ಸಶಕ್ತನಾಗಿದ್ದಾನೆ. ಅವನದೇ ರೀತಿಯಲ್ಲಿ ಸಫಲತೆಯನ್ನು ಪಡೆಯುವ ಅವಕಾಶ, ಸಾಮರ್ಥ್ಯ ಹಾಗು ಹಕ್ಕನ್ನು ಪಡೆದಿದ್ದಾನೆ. ಹೀಗಿದ್ದರೂ ಏನೂ ಗೊತ್ತೇ ಇಲ್ಲದಂತೆ ಇನ್ನೊಬ್ಬರಿಂದಲೇ ಋಣಾತ್ಮಕವಾಗಿ ಪ್ರಭಾವಿತನಾಗುತಿದ್ದಾನೆ. ಧನಿಕ ವರ್ಗಗಳಿಂದ ನಡೆಸಲ್ಪಡುತಿದ್ದ ಹೋಮ-ಹವನ, ಪೂಜಾ-ಪುನಸ್ಕಾರ, ದೇವಾಲಯಗಳಿಂದ ವಿಚಲಿತರಾಗದೆ ಜಗಜ್ಯೋತಿ ಬಸವೇಶ್ವರರು 'ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ ಬಡವನಯ್ಯ' ಎಂದು ಅಂದೇ ಹೇಳಿದ್ದಾರೆ.ತಾನು ಬಡವ ದೈವ ಪೂಜೆ ಹೇಗೆ ಮಾಡಲಿ ಎಂದು ಯೋಚಿಸುವುದರ ಬದಲು ತಮ್ಮ ದೇಹವೆಂಬ ದೇಗುಲದ, ಹೃದಯವೆಂಬ ಗರ್ಭಗೃಹದಲ್ಲಿ ಆ ಪರಮಾತ್ಮನನ್ನು ಪ್ರತಿಷ್ಠಾಪಿಸಲು ಸೂಚಿಸಿದ್ದಾರೆ.

ಇಷ್ಟೆಲ್ಲಾ ಅಂದ ಮೇಲೇ ಅನುಕರಣೆ ತಪ್ಪೇ? ಇನ್ನೊಬ್ಬರಿಂದ ಪ್ರೇರಿತರಾಗಿ ಉತ್ತಮ ಸ್ಥಾನವನ್ನು ಸಂಪಾದಿಸುವುದು ಕೆಟ್ಟ ವಿಚಾರವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಖಂಡಿತವಾಗಿಯೂ ಇದು ತಪ್ಪಲ್ಲ. ನಿಜ ಹೇಳಬೇಕೆಂದರೆ, ಉತ್ತಮ ರೀತಿಯಲ್ಲಿ ಅನುಕರಣೆ ಮಾಡುವುದನ್ನು ನಮಗೆ ಕಲಿಸಿಯೂ ಇಲ್ಲ ನಾವು ಕಲಿತೂ ಇಲ್ಲ. ನಾವು ಋಣಾತ್ಮಕವಾಗಿ ಪ್ರೇರಣೆಗೆ ಒಳಗಾಗುತ್ತೆವೆಯೇ ಹೊರತು, ಧನಾತ್ಮಕವಾಗಿಯಲ್ಲ. ನಾವು ಇನ್ನೊಬ್ಬರಲ್ಲಿರುವ ಭೋಗ್ಯ ವಸ್ತುಗಳನ್ನು ನೋಡುತ್ತೇವೆ ಬದಲಾಗಿ, ಅವುಗಳನ್ನು ಗಳಿಸಲು ಆ ವ್ಯಕ್ತಿಯು ಉಪಯೋಗಿಸಿದ ಮಾರ್ಗವನ್ನಲ್ಲ. ನಾವು ವ್ಯಕ್ತಿಯಲ್ಲಿರುವ ಐಶ್ವರ್ಯದಿಂದ ಮತ್ತಿಗೊಳಗಾಗುತ್ತೆವೆಯೇ ಹೊರತು ಅವನ ಗುಣದಿಂದಲ್ಲ.

ಒಬ್ಬ ಕಷ್ಟಪಟ್ಟು ಓದಿ, ಉತ್ತಮ ರೀತಿಯಿಂದ ಗಳಿಸಿ ಆಸ್ತಿಯನ್ನು ಸಂಪಾದಿಸಿರಬಹುದು. ಆದರೆ ಅವನಲ್ಲಿರುವ ಆಸ್ತಿಯನ್ನು ನಾವು ಕ್ಷಣ ಮಾತ್ರದಲ್ಲೇ ಗಳಿಸಲು ಇಚ್ಚಿಸುತ್ತೆವೆಯೇ ಹೊರತು, ಅವನಂತೆ ಕಷ್ಟಪಡಲು ತಯಾರಿಲ್ಲ. ಇದಕ್ಕಾಗಿ ಅನೇಕ ವಾಮ ಮಾರ್ಗಗಳನ್ನು ಅನುಸರಿಸಿ ನಮ್ಮ ತಲೆ ಮೇಲೇ ನಾವೇ ಚಪ್ಪಡಿ ಎಳೆದುಕೊಳುತಿದ್ದೇವೆ.ವಿದ್ಯಾರ್ಥಿಯು ದ್ವಿಚಕ್ರವಿರುವ ಗೆಳೆಯನಿಂದ ಪ್ರೆರೆಪಿತವಾಗದೆ, ಉತ್ತಮ ಅಂಕವನ್ನು ಪಡೆಯುವ ಸಹಪಾಠಿಯಿಂದ ಪ್ರೇರೇಪಿಸಲ್ಪಟ್ಟರೆ ಇವನೂ ಕೂಡ ಉತ್ತಮ ಅಂಕವನ್ನು ಪಡೆಯಲು ಸಾಧ್ಯ. ಕುಕೃತ್ಯಗಳಿಂದ ಆಸ್ತಿ ಗಳಿಸಿ ಬಳಿಕ ಜೈಲು ಪಾಲದ ಹಲವಾರು ವ್ಯಕ್ತಿಗಳ ಉದಾಹರಣೆ ನಮ್ಮ ಮುಂದಿದ್ದರೂ ಸಹ ಬರೀ ಅವರ ಆಸ್ತಿಗೆ ನಾವು ಮರುಳಾಗುತ್ತೆವೆಯೇ ಹೊರತು ಘಟನೆಯಿಂದ ಪಾಠ ಕಲಿಯಿತ್ತಿಲ್ಲ.

ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಪರಿಹಾರವೆನ್ನುವುದು ಇದ್ದೆ ಇದೆ. ಬಸವಣ್ಣನವರ ವಚನವನ್ನು ಇನ್ನೊಮ್ಮೆ ಪರಿಶೀಲಿಸಿ ನೋಡೋಣ. ಪ್ರಶ್ನೆ ಉದ್ಭವವಾಗುವುದು ಶಿವಾಲಯವನ್ನು ಕಟ್ಟುವುದರಲ್ಲಿ. ಶ್ರೀಮಂತರಲ್ಲಿ ಹಣವಿದೆ. ಅವರು ಎಷ್ಟು ಆಲಯವನ್ನಾದರೂ ಕಟ್ಟಬಹುದು. ಆದರೆ ಬಡವನಾದವನು ಏನು  ಮಾಡಲು ಸಾಧ್ಯ.ಆದರೆ ಬುದ್ಧಿ ಸ್ವಲ್ಪ ಓಡಿಸಿದರೆ ಅವನೂ ದೇಹವೆಂಬ ಶಿವಾಲಯವನ್ನು ಕಟ್ಟಬಹುದು. ಹೀಗೆ ಮಾಡಿದರೆ ದೇವಾಲಯವನ್ನು ಕಟ್ಟಿಸಿದ ಹಾಗೂ ಆಯಿತು ಹಣ ಕಾಸಿಗೂ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಹೀಗೆ ನಮ್ಮ ಬುದ್ಧಿವಂತಿಕೆಯಿಂದ ನಮ್ಮ ಸಾಮರ್ಥ್ಯದಿಂದಲೇ ಸಮಸ್ಯೆ ಪರಿಹರಿಸಲು ಸಾಧ್ಯ. ಆನೆ ಲದ್ದಿ ಹಾಕುವುದೆಂದು ಇಲಿ ಲದ್ದಿ ಹಾಕಲು ಸಾಧ್ಯವಿಲ್ಲ. ಅದು ಬರೀ 'ಬಿಟ್ಟೆ' ಇಡಬಹುದಷ್ಟೇ. ಯಾಕೆಂದರೆ "ನೋಡಿ ಸ್ವಾಮಿ ನಾವಿರೋದೆ ಹೀಗೆ".